....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Tuesday 9 June 2015

ನಾಡೋಜ ಡಾ| ಕಯ್ಯಾರ ಕಿಞಣ್ಣ ರೈ ರವರಿಗೆ 'ಶತಪೂರ್ತಿ ಸಂಭ್ರಮ'



             ಹಿರಿಯ ಸಾಹಿತಿ, ಪಂಪ ಪ್ರಶಸ್ತಿ ಪುರಸ್ಕೃತ, ನಾಡೋಜ ಡಾ|  ಕಯ್ಯಾರ ಕಿಞಣ್ಣ ರೈ ರವರ 'ಶತಪೂರ್ತಿ ಸಂಭ್ರಮ'ದ ಈ ಶುಭ ಸಂದರ್ಭದಲ್ಲಿ ಅವರಿಗೆ ನಮ್ಮ ಶಾಲಾ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿ ವೃಂದದ ಪರವಾಗಿ ಗೌರವಪೂರ್ವಕವಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ.
 ಈ ಸಂದರ್ಭದಲ್ಲಿ ಕಯ್ಯಾರರ ಕುರಿತು ಒಂದಿಷ್ಟು ಮಾಹಿತಿ...
            ಕನ್ನಡ ನಾಡು, ಕನ್ನಡ ಭಾಷೆಯ ಬಗೆಗಿನ ತುಡಿತ, 'ಕನ್ನಡದ ಗಡಿ ಕಾಯೆ, ನುಡಿ ಕಾಯೆ ಓ ಬನ್ನಿ ಬೇಗ' ಎಂದು ಕರೆಯುತ್ತಾ ಕನ್ನಡಮ್ಮನ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅಪ್ಪಟ ಕನ್ನಡ ಹೋರಾಟಗಾರ ಕಯ್ಯಾರ ಕಿಞಣ್ಣ ರೈ. ಇಷ್ಟು ವರ್ಷವೂ ಮಾತು, ಕೃತಿಗಳ ಮೂಲಕ ಕನ್ನಡಪರವಾದ ಹೋರಾಟದ ಬದುಕನ್ನು ಸಾಗಿಸಿ, ತಾನು ಹುಟ್ಟಿದ ಈ ಕಾಸರಗೋಡು ಎಂದಾದರೂ ಒಮ್ಮೆ ಕರ್ನಾಟಕವನ್ನು ಸೇರುವುದೆಂಬ ಹಂಬಲವನ್ನು ಈಗಲೂ ಹೊಂದಿದ್ದಾರೆ. ಆದರೆ ಈಗಿನ ಕನ್ನಡದ ಸ್ಥಿತಿಯನ್ನು ಕಂಡಾಗ ಕಯ್ಯಾರರಂತಹ ಅಪ್ಪಟ ಕನ್ನಡ ಪ್ರೇಮಿಗಳ ಅವಶ್ಯಕತೆ ಎಲ್ಲಾ ರಂಗದಲ್ಲೂ ಎದ್ದು ಕಾಣುತ್ತಿದೆ. ಹಾಗಂತ ಕನ್ನಡಭಿಮಾನಿಗಳು ಇಲ್ಲವೆಂದಲ್ಲ. ಆದರೆ ಕನ್ನಡಕ್ಕಾಗಿ ಸದಾ ತುಡಿಯುವ ಮನಸ್ಸುಗಳ ಸಂಖ್ಯೆಯಲ್ಲಿ ಕೊರತೆಯಿದೆ.
ಪೆರಡಾಲದಲ್ಲಿ 1915 ಜೂನ್ 8 ರಂದು ದುಗ್ಗಪ್ಪ ರೈ ಹಾಗೂ ದೈತಕ್ಕ ದಂಪತಿಗೆ ಹುಟ್ಟದ ಕಯ್ಯಾರರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬದಿಯಡ್ಕದಲ್ಲಿ ಪಡೆದು ಬಳಿಕ ನೀರ್ಚಾಲು ಸಂಸ್ಕೃತ ಕಾಲೇಜು ಪ್ರೌಢ ಶಾಲೆಯಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ವಿದ್ವಾನ್ ಪ್ರಶಸ್ತಿ ಪಡೆದರು. ಉಞಕ್ಕೆಯನ್ನು ಬಾಳ ಸಂಗಾತಿಯನ್ನಾಗಿ ಪಡೆದ ಇವರಿಗೆ ಆರು ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.
         1935 ರಲ್ಲಿ ಮಂಗಳೂರಿನಲ್ಲಿ ಪತ್ರಕರ್ತನಾಗಿ ದುಡಿದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲೂ ಗುರುತಿಸಿಕೊಂಡಿದ್ದರು. ಬಳಿಕ ಪೆರಡಾಲ ಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪಡೆದು, ತಮ್ಮ ಕರ್ತವ್ಯನಿಷ್ಠೆ ಹಾಗೂ ಪ್ರಾಮಾಣಿಕತೆಗೆ 1961 ರಲ್ಲಿ ಇವರಿಗೆ 'ಉತ್ತಮ ಅಧ್ಯಾಪಕ' ಪ್ರಶಸ್ತಿಯನ್ನೂ ಪಡೆದರು.
         ಕಯ್ಯಾರರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಶ್ರೀಮುಖ, ಐಕ್ಯಗಾನ, ಶತಮಾನದ ಗಾನ, ಪಂಚಮಿ, ಚೇತನ, ಪುನರ್ನವ, ಕೊರಗ, ಗಂಧಾವತಿ ಹೀಗೆ ಹಲವಾರು ಕವಿತಾ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. 'ದುಡಿತವೇ ನನ್ನ ದೇವರು' ಎಂಬುದು ಇವರ ಆತ್ಮಕಥನವಾಗಿದೆ.
ಕಯ್ಯಾರರಿಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಇವರ ಬಹುಮುಖ ವ್ಯಕ್ತಿತ್ವವನ್ನು ಕಂಡು ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಹಂಪಿ ಕನ್ನಡ ವಿದ್ಯಾಲಯ ನಾಡೋಜ ಪದವಿ ನೀಡಿದೆ. 2013 ರಲ್ಲಿ ಕರ್ನಾಟಕ ಸರಕಾರ ಪಂಪ ಪ್ರಶಸ್ತಿ ನೀಡಿ ಗೌರವಿಸಿದೆ. ಇದಲ್ಲದೆ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಬಿರುದು ಬಾವಲಿಗಳನ್ನು ನೀಡಿ ಗೌರವಿಸಿದೆ. ಅಲ್ಲದೆ ಮಂಗಳೂರಿನಲ್ಲಿ ಜರಗಿದ 66 ನೇ ಅಖಿಲ ಭಾರತ ಜನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ಹೀಗೆ ವಿವಿಧೆಡೆಯಲ್ಲಿ ಗೌರವಕ್ಕೆ ಭಾಜನರಾಗಿದ್ದಾರೆ.
          'ಶತಮಾನದ ಗಾನ'ವನ್ನು ಪಸರಿಸಿದ ಶತಮಾನದ ಕವಿ ಕಯ್ಯಾರರು ಇನ್ನಷ್ಟು ವರ್ಷಗಳು ನಮ್ಮೊಂದಿಗಿದ್ದು ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವಂತಾಗಲಿ ಎಂಬುದು ಪ್ರತಿಯೊಬ್ಬ ಕನ್ನಡ ತಾಯಿಯ ಮಕ್ಕಳ ಹಾರೈಕೆ.

No comments:

Post a Comment