....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Thursday 23 June 2016

ಶುಭ ವಿದಾಯದ ಮನದಾಳದ ಮಾತು

            ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತನಿಂದೆತ್ತ ಸಂಬಂಧವಯ್ಯ....!!!?? ಈ ಸಂಬಂಧವೇ ಹೀಗೆ, ಎಲ್ಲವೂ ಆಕಸ್ಮಿಕ ಅನಿರೀಕ್ಷಿತ. ಜೀವನದ ತಿರುವುಗಳು ಬಾಳನೌಕೆಯನ್ನು ಯಾವುದೋ ರಹದಾರಿಯಲ್ಲಿ ಕೊಂಡೊಯ್ಯುತ್ತವೆ. ಈ ಸಮಯದಲ್ಲಿ ಕಲಿಯುವ ಪಾಠ ಜೀವನವನ್ನು ಇನ್ನಷ್ಟು ಸುಂದರವಾಗಿಸುತ್ತದೆ.
           ನನ್ನ ಅಧ್ಯಾಪನ ವೃತ್ತಿ ಜೀವನದ ಮೊದಲ ಮೆಟ್ಟಿಲು ಕಣ್ವತೀರ್ಥದಲ್ಲಿರುವ ಉದ್ಯಾವರ ಭಗವತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭವಾಯಿತು. ಹೋರಾಟದ ಸೆಲೆಯಲ್ಲಿ ಮುಂದೋಡುವ ಕಾಯಕ. ಪರಿಸ್ಥಿತಿಯನ್ನರಿತು ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾಗಿತ್ತು. ಇರುವ ಸ್ಥಾನ, ಪಡೆದ ಸಂಸ್ಥೆಯನ್ನು ಉಳಿಸಿ ಬೆಳೆಸುವ ದಾರಿ ಬಲು ಕಠಿಣವಾಗಿದ್ದರೂ ಆಗ ನಮ್ಮೊಂದಿಗೆ ಕೈ ಜೋಡಿಸಿದವರು ಶಾಲಾ ಆಡಳಿತ ಸಮಿತಿ, ಶಿಕ್ಷಕ ವೃಂದ, ರಕ್ಷಕರು ಹಾಗೂ ಊರ ಶಾಲಾ ಹಿತೈಷಿಗಳು. ಆಗಲೇ ನಾನು ನನ್ನ ಸ್ಥಾನವನ್ನು ನಾ ತಿಳಿದುಕೊಂಡದ್ದು. ಶಾಲೆಯ ಪ್ರತಿಯೊಂದು ಆಗುಹೋಗುಗಳಲ್ಲಿ ಸಿಕ್ಕ ಬೆಂಬಲ, ಪ್ರೋತ್ಸಾಹ ಎಲ್ಲವನ್ನೂ ಸುಲಲಿತವಾಗಿ ನಡೆಸಲು ಸಹಾಯವಾಯಿತು. ಈ ಸಂದರ್ಭದಲ್ಲಿ ನಾನು ಗಳಿಸಿದ ಪ್ರೀತಿ, ಸ್ನೇಹ, ಗೌರವ ಜೀವನದಲ್ಲಿ ಸಾರ್ಥಕತೆಯನ್ನು ಪಡೆದಂತಿತ್ತು. ಎಲ್ಲವೂ ಆ ಭಗವತೀ ಮಾತೆಯ ಅನುಗ್ರಹ. ಸುಮಾರು 7 ವರ್ಷಗಳ ಕಾಲ ಸಾರ್ಥಕ ವೃತ್ತಿ ಜೀವನವನ್ನು ಸವೆಸಿದುದು ಎಲ್ಲವೂ ನಿನ್ನೆ-ಮೊನ್ನೆಯಲ್ಲಿ ನಡೆದಂತಿದ್ದು ಕಣ್ಣಿಗೆ ಕಟ್ಟಿದಂತಿದೆ.
       ಆದರೆ ಎಲ್ಲವೂ ವಿಧಿಲಿಖಿತ. ಜೀವನದಲ್ಲಿ ಬರುವ ತಿರುವುಗಳಿಗೆ ತಲೆ ಬಾಗಲೇ ಬೇಕಾದ ಅನಿವಾರ್ಯತೆ. ಅನಿರೀಕ್ಷಿತವೆಂಬಂತೆ ಸರಕಾರಿ ನೇಮಕಾತಿಯ ಅಧ್ಯಾಪಕ ಹುದ್ದೆಗೆ ಆಯ್ಕೆಯಾದಾಗ ಖುಷಿಯೊಂದಿಗೆ ಸಂಧಿಗ್ಧ ಪರಿಸ್ಥಿತಿಯ ಅನುಭವವಾಯಿತು. 7 ವರ್ಷದ ಒಡನಾಟದ ವೃತ್ತಿ ಜೀವನದ ಮುಂದೆ ಬಂದ ಅವಕಾಶವು ಗೌನವಾಗಿ ಕಂಡರೂ ಪರಿಸ್ಥಿತಿಯನ್ನು ಅರಿತು ಮುಂದುವರಿಯಬೇಕಾಯಿತು. ಕೊನೆಗೂ ಭಾರವಾದ ಮನಸ್ಸಿನಿಂದ ಸರಕಾರಿ ಶಾಲೆಯಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ತೀರ್ಮಾನಿಸಿದ್ದೇನೆ.
       ಈ ಸಂದರ್ಭದಲ್ಲಿ ಇಲ್ಲಿಯವರೆಗೆ ನನ್ನನ್ನು ಸಲಹಿ ಪೋಷಿಸಿದ ಉದ್ಯಾವರ ಭಗವತಿ ಕಿರಿಯ ಪ್ರಾಥಮಿಕ ಶಾಲೆ, ಕಣ್ವತೀರ್ಥದ ಎಲ್ಲಾ ಶಿಕ್ಷಕ ವೃಂದ, ಮಕ್ಕಳ ರಕ್ಷಕರು, ಆಡಳಿತ ಸಮಿತಿ, ಊರ ಬಾಂಧವರು, ಹಿತೈಷಿಗಳು ಹಾಗೂ ಸ್ನೇಹಿತರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮಕ್ಕಳ ನಿಷ್ಕಲ್ಮಶ ಪ್ರೀತಿಗೆ ನಾ ಮೂಕನಾಗಿದ್ದೇನೆ. ಅದಕ್ಕೆ ಬೆಲೆ ಕಟ್ಟಲಾಗದು. ನಿಮ್ಮ ಪ್ರೀತಿ, ಸ್ನೇಹ, ಗೌರವಗಳಿಗೆ ನಾ ಯಾವತ್ತೂ ಚಿರಋಣಿ. ಮುಂದೆಯೂ ಇದು ಹೀಗೆ ಇರಲಿ ಎಂದು ಆಶಿಸುವ......
ನಿಮ್ಮವನೇ.... 'ಜೆ.ಪಿ'



ಶಾಲಾ ಚುನಾವಣೆ 2016-17

            2016-17 ನೇ ಸಾಲಿನ ಶಾಲಾ ನಾಯಕನನ್ನು ಆಯ್ಕೆ ಮಾಡಲು ಶಾಲಾ ಚುನಾವಣೆಯನ್ನು ನಡೆಸಲಾಯಿತು. ಆ ಪ್ರಯುಕ್ತ ಚುನಾವಣಾ ಮುನ್ನಾ ದಿನ ಸ್ಪರ್ಧಿಸುವ ಅಭ್ಯರ್ಥಿಗಳು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿಯವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಚುನಾವಣಾ ದಿನ ಶಾಲೆಯು ರಂಗೇರಿತ್ತು. ಮತದಾರರು ಸರದಿ ಸಾಲಿನಲ್ಲಿ ಬಂದು ತಮ್ಮ ಬೆರಳಿಗೆ ಮತದಾನದ ಗುರುತನ್ನು ಹಾಕಿ ಗೌಪ್ಯ ಮತದಾನದ ಮೂಲಕ ಮತ ಚಲಾಯಿಸಿದರು. ಶಾಲಾ ಆಡಳಿತ ಸಮಿತಿ ಸದಸ್ಯರು, ಪಿ.ಟಿ.ಎ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಮತದಾನದ ಬಳಿಕ ಮತ ಎಣಿಕೆಯನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿಯವರ ನೇತೃತ್ವದಲ್ಲಿ ನಡೆಸಲಾಯಿತು. ಬಳಿಕ ಫಲಿತಾಂಶವನ್ನು ಘೋಷಣೆ ಮಾಡಲಾಯಿತು. ಶಾಲಾ ನಾಯಕಿಯಾಗಿ ಕುಮಾರಿ ನಿಶ್ಮಿತ ಉಪನಾಯಕಿಯಾಗಿ ಪಿಝಾ ಫಾತಿಮ ಆಯ್ಕೆಯಾದರು. ಆಗ ವಿಜೇತ ಅಭ್ಯರ್ಥಿಗಳ ಹಾಗೂ ಬೆಂಬಲಿಗರ ಹರ್ಷೋಧ್ಘಾರ ಮುಗಿಲು ಮುಟ್ಟಿತ್ತು. ಸೋತ ಅಭ್ಯರ್ಥಿಗಳ ಕಣ್ಣಂಚಲ್ಲಿ ನೀರು ತುಂಬಿ ನಿರಾಶೆಯನ್ನು ವ್ಯಕ್ತಪಡಿಸಿದರು. ಬಳಿಕ ವಿಜೇತ ಅಭ್ಯರ್ಥಿಗಳಿಗೆ ಮಾಲೆ ಹಾಗೂ ಹೂಗುಚ್ಛವನ್ನು ನೀಡಿ ಅಭಿನಂದಿಸಲಾಯಿತು. ವಿಜೇತ ಅಭ್ಯರ್ಥಿಗಳ ಬೆಂಬಲಿಗರಿಂದ ವಿಜಯ ಯಾತ್ರೆಯು ನಡೆಯಿತು. ನೂತನ ನಾಯಕರಿಗೆ ಪ್ರಮಾಣ ವಚನ ಕಾರ್ಯಕ್ರಮ ನಡೆಸಲಾಯಿತು.


















Tuesday 21 June 2016

ಉಚಿತ ಪುಸ್ತಕ, ಸಮವಸ್ತ್ರ ಹಾಗೂ ಕಲಿಕೋಪಕರಣಗಳ ವಿತರಣೆ

          ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ ಹಾಗೂ ಕಲಿಕೋಪಕರಣಗಳ ವಿತರಣಾ ಕಾರ್ಯಕ್ರಮ ಶಾಲಾ ಆಡಳಿತ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಿತು. ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ ಮುಂಬೈಯವರು ನೀಡಿದ ಪುಸ್ತಕ ಹಾಗೂ ಕಲಿಕೋಪಕರಣಗಳನ್ನು ಶ್ರೀ ಕೃಷ್ಣಪ್ಪ ಬೆಂಗರೆ ವಿತರಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ, ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ, ಬೋವಿ ಮಹಿಳಾ ಸಂಘದ ಉಪಾಧ್ಯಕ್ಷೆ ಶ್ರೀಮತಿ ಶಾಲಿನಿ ಕೆ ಬೆಂಗರೆ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಭವ್ಯಶ್ರೀ ಯನ್ ವಂದಿಸಿದರು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ನಿರೂಪಿಸಿದರು.










ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

            2016-17 ನೇ ಸಾಲಿನ ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಕಳೆದ ವರ್ಷದ ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಯವರು ಕಳೆದ ಶೈಕ್ಷಣಿಕ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಬಳಿಯ ನೂತನ ರಕ್ಷಕ-ಶಿಕ್ಷಕ ಸಂಘ ಹಾಗೂ ಮಾತೃ ಮಂಡಳಿಯ ಸಮಿತಿಯನ್ನು ರೂಪೀಕರಿಸಲಾಯಿತು. ಪಿ.ಟಿ.ಎ ಅಧ್ಯಕ್ಷರಾಗಿ ಶ್ರೀ ಸದಶಿವ ಕಣ್ವತೀರ್ಥ, ಉಪಾಧ್ಯಕ್ಷೆಯಾಗಿ ಶ್ರೀಮತಿ ತಿರುಮಲೇಶ್ವರೀ ಭಟ್'ರವರು ಅವಿರೋಧವಾಗಿ ಪುನರಾಯ್ಕೆಗೊಂಡರು. ಮಾತೃಮಂಡಳಿಯ ಅಧ್ಯಕ್ಷೆಯಾಗಿ ಶ್ರೀಮತಿ ಲಾವಣ್ಯಾಕ್ಷಿ, ಉಪಾಧ್ಯಕ್ಷೆಯಾಗಿ ಕದೀಜ ಕಣ್ವತೀರ್ಥರವರು ಅವಿರೋಧವಾಗಿ ಆಯ್ಕೆಯಾದರು. ಶಾಲಾ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಕಾರ್ಯಕ್ರಮ ನಡೆಸಿಕೊಟ್ಟರು.



ವಿಶ್ವ ಯೋಗ ದಿನಾಚರಣೆ

             ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಶಾಲಾ ಮಟ್ಟದ ಯೋಗ ತರಭೇತಿಯ ಕಾರ್ಯಕ್ರಮವನ್ನು ಯೋಗ ಸಾಧಕಿ ಗಿರಿಜಾ ಯನ್ ಉದ್ಯಾವರ್'ರವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಶ್ರೀ ಕೃಷ್ಣಪ್ಪ ಬೆಂಗರೆ, ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ, ಬೋವಿ ವಿದ್ಯಾದಾಯಿನಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಶಾಲಿನಿ ಕೆ ಬೆಂಗರೆ ಉಪಸ್ಥಿತರಿದ್ದರು. ಬಳಿಕ ಶಾಲಾ ಮಕ್ಕಳಿಗೆ ಯೋಗ ತರಭೇತಿಯನ್ನು ಗಿರಿಜಾ ಯನ್ ಉದ್ಯಾವರ್'ರವರು ನೀಡಿದರು.